belagavi news:
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಅದರಂತೆ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಗಳಿಗೆ 5.25% ಮತ್ತು ಬಲಗೈ ಸಮುದಾಯಗಳಿಗೆ 5.25% ಮೀಸಲಾತಿ ನೀಡಲಾಗುವುದು ಜೊತೆಗೆ ಸ್ಪರ್ಶ ಸಮುದಾಯ ಹಾಗೂ ಅಲೆಮಾರಿ ಸಮುದಾಯಗಳಿಗೆ ಒಟ್ಟು 4.5 % ಮೀಸಲಾತಿ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು: ಪರಿಶಿಷ್ಟ ಜಾತಿಗಳ 15% ಮೀಸಲಾತಿಗೆ ಒಳಪಟ್ಟು ಒಳ ಮೀಸಲಾತಿಯನ್ನು ಕಲ್ಪಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ರೋಸ್ಟರ್ ಬಿಂದುವನ್ನು 100 ರಿಂದ 400 ಕ್ಕೆ ಹೆಚ್ಚಳ ಮಾಡುವ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮಿಸಲಾತಿ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈಗಿನ 100 ರೋಸ್ಟರ್ ಬಿಂದುಗಳ ವ್ಯವಸ್ಥೆಯಿಂದ ಪರಿಶಿಷ್ಟ ಜಾತಿಯ ಎಲ್ಲಾ ಉಪ ಸಮುದಾಯಗಳಿಗೆ ಸಮರ್ಪಕ ನ್ಯಾಯ ಒದಗಿಸುವುದು ಕಷ್ಟಕರ ವಾಗುತ್ತಿತ್ತು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ರೋಸ್ಟರ್ ಬಿಂದುಗಳನ್ನು100 ರಿಂದ 400 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ರಾಜ್ಯದಲ್ಲಿ 100 ಬಿಂದುಗಳ ರೋಸ್ಟರ್ ಪದ್ಧತಿ ಜಾರಿಯಲ್ಲಿದ್ದು 100 ನೇಮಕಾತಿ ಹುದ್ದೆಗಳನ್ನು ವಿವಿಧ ಸಮುದಾಯಗಳಿಗೆ ನಿಗದಿಪಡಿಸುವ ವಿಧಾನ ಅನುಸರಿಸಲಾಗುತ್ತಿದೆ.
ಆದರೆ ಈ ವ್ಯವಸ್ಥೆಯಲ್ಲಿ ಸೂಕ್ಷ್ಮ ಹಂಚಿಕೆ ಸಾಧ್ಯವಾಗದೆ ಕೆಲವು ಸಮುದಾಯ ಗಳಿಗೆ ಸಮರ್ಪಕ ಪ್ರತಿನಿಧಿತ್ವ ಸಿಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತ ವಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಗಳಿಗೆ 5.25 ಶೇಕಡಾ ಬಲಗೈ ಸಮುದಾಯಗಳಿಗೆ 5.25 ಶೇಕಡಾ ಹಾಗೂ ಸ್ಪರ್ಶ ಸಮುದಾಯ ಮತ್ತು ಅಲೆಮಾರಿ ಸಮುದಾಯಗಳಿಗೆ ಒಟ್ಟು 4.5% ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಮಾಣದ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ರೋಸ್ಟರ್ ಬಿಂದುಗಳನ್ನು 400 ಕ್ಕೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
100 ಹುದ್ದೆಗಳ ನೇಮಕಾತಿಯಲ್ಲಿ ಶೇ.5.25 ಹುದ್ದೆಗಳನ್ನು ನೀಡಲು ಸಾಧ್ಯವಿಲ್ಲ. ನೇಮಕಾತಿ ವೇಳೆ ಈ ಶೇ. 0.25 ರಷ್ಟು ಭಾಗ ಉಳಿಯುತ್ತಾ ಹೋಗುತ್ತದೆ. 4 ಬಾರಿ ನೇಮಕಾತಿ ನಡೆದಾಗ ಮಾತ್ರ ಅದು ಒಂದು ಪೂರ್ಣ ಹುದ್ದೆಯಾಗುತ್ತದೆ. (0.25×4=1). ಈ ಬಿಕ್ಕಟ್ಟನ್ನು ನಿಗಿಸಲು ರೋಸ್ಟರ್ ಬಿಂದುಗಳನ್ನು 400 ಕ್ಕೆ ಹೆಚ್ಚಿಸಲಾಗಿದೆ. 400ರ ರೋಸ್ಟರ್ನಲ್ಲಿ ಶೇ. 5.25 ಎಂದರೆ ನಿಖರವಾಗಿ 21 ಹುದ್ದೆಗಳಾಗುತ್ತವೆ.
3-9-2025ರ ಅನ್ವಯ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಅಳವಡಿಸಿಕೊಂಡು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಸುತ್ತಿರುವ ಅಧಿಸೂಚನೆಗಳನ್ನು ಹೊರತುಪಡಿಸಿ ಇತರ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸರ್ಕಾರ ತೀರ್ಮಾನಿಸಿದೆ. ಈ ಹಿಂ ಪಡೆಯಲಾದ ಅದಿ ಸೂಚನೆಗಳನ್ನು ಮೇಲ್ಕಂಡ ಒಳ ಮೀಸಲಾತಿ ಕ್ರಮಗಳಿಗೆ ಅನುಗುಣವಾಗಿ ಪರಿಷ್ಕರಿಸಿ ಪುನಃ ಹೊರಡಿಸಲಾಗುವುದು. ಅದೇ ರೀತಿ 27 -2 -2026 ರಂದು ಒಳ ಮೀಸಲಾತಿ ಅಳವಡಿಸದೇ ಹೊರಡಿಸಲಾದ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಿ, ಹೊಸ ಮೀಸಲಾತಿ ನಿಯಮಾವಳಿಗಳ ಪ್ರಕಾರ ಪರಿಷ್ಕೃತ ಅಧಿಸೂಚನೆಗಳನ್ನು ತಕ್ಷಣವೇ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಮೇಲೆ ನಿರ್ಧರಿಸಿದಂತೆ, ಈಗಾಗಲೇ ಆರ್ಥಿಕ ಇಲಾಖೆಯು ಅನು ಬೋಧನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಚಿವ ಸಂಪುಟವು ತೀರ್ಮಾನಿಸಿದೆ ಮುಂದೆ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿಸಿರುವ ಶೇಕಡಾ 24ರಷ್ಟು ಮೀಸಲಾತಿ ಪ್ರಮಾಣವನ್ನು ಒಪ್ಪಿದಲ್ಲಿ ಶೇಕಡಾ 6 ರಷ್ಟು ಹುದ್ದೆಗಳನ್ನು ಬ್ಯಾಕ್ ಲಾಗ್ ಹುದ್ದೆಗಳೆಂದು ಪರಿಗಣಿಸಿ ನೇಮಕಾತಿ ಮಾಡಲಾಗುವುದು.
ದಿನಾಂಕ 27-4- 2026ರಂದು ಒಳ ಮೀಸಲಾತಿ ಜಾರಿ ಸಂಬಂಧವಾಗಿ ಹೊರಡಿಸಲಾಗಿದ್ದ ಹಿಂದಿನ ಆದೇಶವನ್ನು ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ ಅದರ ಬದಲಾಗಿ ಪರಿಷ್ಕೃತ ನಿರ್ಣಯದ ಅನ್ವಯ ಹೊಸ ಹಾಗೂ ಸೂಕ್ತ ಆದೇಶವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಹೊರಡಿಸಲು ಸೂಚಿಸಲಾಗಿದೆ. ಇದಲ್ಲದೆ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಒಳ ಮೀಸಲಾತಿ ನಿಯಮಗಳಿಗೆ ಅನುಗುಣವಾದ 400 ಬಿಂದುಗಳ ಹೊಸ ರೋಸ್ಟರ್ ವ್ಯವಸ್ಥೆಯನ್ನು ರೂಪಿಸಿ ಪ್ರಕಟಿಸಲು ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಈ ಕ್ರಮದಿಂದ ಒಳ ಮೀಸಲಾತಿ ಜಾರಿಗೆ ಸ್ಪಷ್ಟತೆ ಮತ್ತು ಸಮರ್ಪಕ ಅನುಷ್ಠಾನ ಸಾಧ್ಯವಾಗಲಿದೆ.
Also Read: