Belagavi News :
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ XUV300 ಕಾರು ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಮೇಲ್ನೋಟದ ತನಿಖೆಯಲ್ಲಿ ಕಾರು ಸ್ಪೋಟಕ್ಕೆ ಯಾವುದೇ ಸ್ಪೋಟಕ ವಸ್ತುಗಳ ಬಳಕೆಯ ಕುರುಹುಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಹಿಪ್ಪರಗಿ ಗ್ರಾಮದ ಯುವರಾಜ ವೈನ್ ಸ್ಟೋರ್ ಮಾಲೀಕ ಕಮ್ ಮ್ಯಾನೇಜರ್ ಹನುಮಂತ ಅಥಣಿ ಅವರಿಗೆ ಸೇರಿದ ಕಾರನ್ನು ನಿನ್ನೆ ಸಂಜೆ ಸುಮಾರು 4:30ಕ್ಕೆ ವೈನ್ ಸ್ಟೋರ್ ಎದುರು ನಿಲ್ಲಿಸಲಾಗಿತ್ತು. ರಾತ್ರಿ 10:45ರ ವೇಳೆಗೆ ಏಕಾಏಕಿ ಕಾರು ಸ್ಪೋಟಗೊಂಡಿದೆ.
ಘಟನೆ ಮಾಹಿತಿ ದೊರೆತ ತಕ್ಷಣ ಪೊಲೀಸರು ಅಗ್ನಿಶಾಮಕ ದಳ, ಎಸ್ಓಸಿಒ (Scence of Crime) ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ವೇಳೆ ಕಾರು ನಿಲ್ಲಿಸಿದ ಬಳಿಕ ಯಾವುದೇ ವ್ಯಕ್ತಿಗಳು ಅದರ ಬಳಿ ತೆರಳಿರುವುದು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ವಾಹನದಲ್ಲಿನ ತಾಂತ್ರಿಕ ದೋಷದಿಂದಾಗಿ ಸ್ಪೋಟ ಸಂಭವಿಸಿರುವ ಸಾದ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಎಸ್ ಪಿ ಸಿದ್ದಾರ್ಥ್ ಗೋಯಲ್ ಸ್ಪಷ್ಟಪಡಿಸಿದ್ದು ಪ್ರಕರಣ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.