ರಿಷಬ್ ಪಂತ್ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ತಾಲೀಮು ಮಾಡುತ್ತಿದ್ದಾಗ ಚೆಂಡು ಪಕ್ಕೆಗೆ ತಗುಲಿ ಗಾಯ ಉಂಟಾಗಿದೆ. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ನೆರವಿಗೆ ಧಾವಿಸಿ ಚಿಕಿತ್ಸೆ ನೀಡಿದರು. ಈ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಬಿಸಿಎ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಚಿಕಿತ್ಸೆ ಪಡೆಯುವಾಗ ಪಂತ್ ನೋವಿನಿಂದ ಮುಖ ಕಿವುಚಿಕೊಳ್ಳುತ್ತಿರುವುದು ಕಂಡುಬಂದಿತು. ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ರಿಷಬ್ ಪಂತ್ ಅವರು ಮೈದಾನದಿಂದ ನಿರ್ಗಮಿಸಿದ್ದಾರೆ.
ರಿಷಬ್ ಪಂತ್ ಅವರು ಅವರು ಕೊನೆಯ ಬಾರಿಗೆ ಜುಲೈ 2024 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿದ್ದರು. 2025 ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದಲ್ಲಿದ್ದರೂ ತಂಡದ ಮ್ಯಾನೇಜ್ ಮೆಂಟ್ ಕೆಎಲ್ ರಾಹುಲ್ ಅವರನ್ನು ಪ್ರಥಮ ಪ್ರಾಶಸ್ತ್ಯದ ಬ್ಯಾಟರ್ ಆಗಿ ಪರಿಗಣಿಸಿದ್ದರಿಂದ ಅವರು ಯಾವುದೇ ಪಂದ್ಯ ಆಡಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಗಾಯಗೊಂಡಿದ್ದ ವೇಳೆ ರಿಷಬ್ ಪಂತ್ ಅವರು ಹಂಗಾಮಿ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಅವರು, ಸರ್ವಿಸಸ್ ಮತ್ತು ರೈಲ್ವೇಸ್ ವಿರುದ್ಧ ಎರಡು ಅರ್ಧಶತಕಗಳನ್ನು ಗಳಿಸಿದ್ದರು.
ನ್ಯೂಜಿಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಗಾಯದಿಂದ ಚೇತರಿಸಿಕೊಂಡಿರುವ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಕಣಕ್ಕಿಳಿದಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಅವರ ಜೊತೆಗೆ ಕರ್ನಾಟಕದ ಪ್ರಸಿದ್ಧ ಕೃಷ್ಣ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಜೊತೆ ಆಲ್ರೌಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರು ಬೆಂಬಲವಾಗಿ ನಿಲ್ಲಲಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಜ್ಞಬ್ಯಾಟರ್ ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳು ಜನವರಿ 14 ರಂದು ರಾಜ್ಕೋಟ್ನಲ್ಲಿ ಮತ್ತು ಜನವರಿ 18 ರಂದು ಇಂದೋರ್ನಲ್ಲಿ ನಡೆಯಲಿವೆ.
ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಾಲೀಮಿನ ವೇಳೆ ಗಾಯಗೊಂಡ ಕಾರಣ ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರಿಗೆ ಬದಲಿಯಾಗಿ ಧ್ರುವ್ ಜ್ಯುರೆಲ್ ಅಯ್ಕೆಯಾಗಿದ್ದು ಈಗಾಗಲೇ ತಂಡವನ್ನು ಸೇರಿದ್ದಾರೆ. ಕೆಎಲ್ ರಾಹುಲ್ ಅವರು ಮೊದಲ ಪ್ರಾಶಸ್ತ್ಯದ ವಿಕೆಟ್ ಕೀಪರ್ ಆಗಿ ಮುಂದುವರಿಯಲಿರುವುದರಿಂದ ಈ ಬದಲಾವಣೆ ದೊಡ್ಡ ಮಟ್ಟಿಗೆ ತಂಡದ ಸಂಯೋಜನೆ ಮೇಲೆ ಪರಿಣಾಮ ಬೀರದು. ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಸರಣಿಗೆ ಕೆಎಲ್ ರಾಹುಲ್ ಜೊತೆ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ ಕೃಷ್ಣ ಪ್ಲೇಯಿಂಗ್ ಇಲೆವೆನ್ ನಲ್ಲಿ ಇದ್ದಾರೆ.
ಇನ್ನಷ್ಟು ಓದಿರಿ:
ಇರಾನ್ ದಂಗೆಯಲ್ಲಿ ೧೧೬ ಏರಿದ ಸಾವಿನ ಸಂಖ್ಯೆ : ರಾಜಕುಮಾರ್ ಕರೆ