ಉಪೇಂದ್ರ ಓರ್ವ ರೈಟರ್ ಆಗಿ ಚಿತ್ರರಂಗ ಪ್ರವೇಶಿಸಿದ್ರೂ, ನಂತರ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ. ಸ್ಯಾಂಡಲ್ವುಡ್ನ ದಿ ಮೋಸ್ಟ್ ಕ್ರಿಯೇಟಿವ್ ಡೈರೆಕ್ಟರ್ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಇವರು ಗುರುವನ್ನೇ ಮೀರಿಸಿದರೆಂಬ ಖ್ಯಾತಿಯನ್ನೂ ಗಳಿಸಿದ್ದಾರೆ. ಈ ಮಾತನ್ನು ಸ್ವತಃ ಕಾಶೀನಾಥ್ ಕೂಡಾ ಒಪ್ಪಿಕೊಂಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರ ಆಪ್ತರೊಬ್ಬರು ಈ ಹಿಂದೆ ಈಟಿವಿ ಭಾರತದ ಜೊತೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.
ಬೆಂಗಳೂರಿನ ಎಪಿಎಸ್ ಕಾಲೇಜ್ನಲ್ಲಿ ವಿದ್ಯಾಭ್ಯಾಸ ಪಡೆಯುವ ಸಂದರ್ಭ ಉಪೇಂದ್ರ ನಾಟಕ ಹಾಗೂ ಸಿನಿಮಾ ಡೈಲಾಗ್ಸ್ ಬರೆಯುತ್ತಿದ್ದರು. ಆರಂಭದ ದಿನಗಳಲ್ಲಿ ಕಾಶೀನಾಥ್ ಅವರ ಸಿನಿಮಾಗಳನ್ನೇ ಹೆಚ್ಚಾಗಿ ನೋಡುತ್ತಿದ್ರು. ನಂತರ, ಕಾಶೀನಾಥ್ ಅವರ ಬಳಿ ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯೋದಕ್ಕೆ ಸೇರಿಕೊಂಡ್ರು.
ತೆರೆ ಹಿಂದಿನ ಕೆಲಸಗಳ ಜೊತೆಗೆ ಕಾಶೀನಾಥ್ ಅಭಿನಯದ ಅನಂತನ ಅವಾಂತರ ಹಾಗೂ ಲವ್ ಮಾಡಿ ನೋಡು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಾರೆ. ಗುರುಗಳಾದ ಕಾಶಿನಾಥ್ ಅವರಿಗೆ ಸಿನಿಮಾ ಡೈರೆಕ್ಟರ್ ಪಾತ್ರ ಕೊಟ್ಟು, ಯುವ ನಟ ಕುಮಾರ್ ಗೊಂವಿಂದ್ ಅವರನ್ನು ಹೀರೋ ಮಾಡಿದ ಹಾರರ್ ಥ್ರಿಲ್ಲರ್ ಚಿತ್ರ 'ಶ್' (1993) ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಉಪೇಂದ್ರ ಅವರಿಗೆ ಸಕ್ಸಸ್ಫುಲ್ ಡೈರೆಕ್ಟರ್ ಅನ್ನೋ ಹೆಸರು ತಂದುಕೊಡುತ್ತದೆ.
ಹೀಗೆ ಆರಂಭದ ದಿನಗಳಲ್ಲೇ ಯಶಸ್ಸು ಕಂಡ ಉಪೇಂದ್ರ ಅವರಿಗೆ ಹ್ಯಾಟ್ರಿಕ್ ಸಕ್ಸಸ್ ತಂದುಕೊಟ್ಟ ಚಿತ್ರ 'ಓಂ' (1995). ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಮುಖ್ಯಭೂಮಿಕೆಯ ಈ ಯಶಸ್ವಿ ಸಿನಿಮಾದಲ್ಲಿ ರಿಯಲ್ ರೌಡಿಗಳು ಕಾಣಿಸಿಕೊಂಡಿದ್ದರು. ಈ ಚಿತ್ರದ ಭರ್ಜರಿ ಯಶಸ್ಸು ನಿರ್ದೇಶಕ ಉಪೇಂದ್ರ ಮತ್ತು ನಾಯಕ ನಟ ಶಿವಣ್ಣ ಇಬ್ಬರಿಗೂ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.
75 ಲಕ್ಷ ರೂಪಾಯಿ ಬಜೆಟ್ನಲ್ಲಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣ ಮಾಡಿದ್ದ ಈ ಚಿತ್ರ ಆ ಕಾಲದಲ್ಲೇ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು. ಅಲ್ಲದೇ ಈ ಯಶಸ್ವಿ ಸಿನಿಮಾ ಚಿತ್ರಮಂದಿರಗಳಲ್ಲಿ ಅಸಂಖ್ಯಾತ ಬಾರಿ ಪ್ರದರ್ಶನಗೊಂಡಿದೆ. ಜೊತೆಗೆ, ಈ ಚಿತ್ರಕ್ಕಾಗಿ ರಾಜ್ ಕುಟುಂಬದಿಂದ ಉಪೇಂದ್ರ ಅವರಿಗೆ 5,000 ರೂಪಾಯಿ ಅಡ್ವಾನ್ಸ್ ಕೂಡಾ ಸಿಕ್ಕಿತ್ತು ಎಂದು ಆಪ್ತರು ಮಾಹಿತಿ ನೀಡಿದ್ದರು. ನಂತರ 1998ರ ಫೆಬ್ರವರಿ 12ರಂದು ತೆರೆಕಂಡ 'A' ಸಿನಿಮಾ ಉಪೇಂದ್ರ ಅವರ ಯಶಸ್ಸಿನಾದಿಯನ್ನು ಮುಂದುವರಿಸಿತು.
ನಟಿಸಿ, ನಿರ್ದೇಶಿಸಿದ ಈ ಚಿತ್ರ ರಾತ್ರೋರಾತ್ರಿ ಉಪ್ಪಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಈ ಚಿತ್ರ ಸೂಪರ್ ಹಿಟ್ ಆದ ನಂತರ ಬಂದ ಚಿತ್ರವೇ 'ಉಪೇಂದ್ರ'. ನಾನು ಎಂಬ ಅಹಮ್ ಇದ್ರೆ ಏನಾಗುತ್ತೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿ ಬುದ್ದಿವಂತ ಅನ್ನೋ ಪಟ್ಟ ಗಳಿಸಿಕೊಳ್ತಾರೆ. ಎ ಹಾಗೂ ಉಪೇಂದ್ರ ಸಿನಿಮಾಗಳಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಅವರೇ ಹೇಳಿಕೊಂಡಿರುವ ಹಾಗೇ, ನನಗೆ ನಟಿಸುವ ಆಸೆಯಿತ್ತು.
ನಿರ್ದೇಶಕನಾಗಿ ಯಶಸ್ಸು ಕಂಡ ಬಳಿಕ ಅದನ್ನು ಮರೆತುಬಿಟ್ಟಿದ್ದೆ. ಆದ್ರೆ, ನಿರ್ಮಾಪಕರೇ ಬಂದು ಹೇಳಿದಾಗ ಮಾಡೋಣ ಎಂದುಕೊಂಡೆ. ನನಗೆ ಸೂಕ್ತ ಎನ್ನುವಂತೆ ಪಾತ್ರ, ಕಥೆ ಡಿಸೈನ್ ಮಾಡಿಕೊಂಡೆ. ಆದ್ರೆ ಆ ಸಿನಿಮಾ ಶುರುವಾಗುವಾಗ ಸಾಕಷ್ಟು ಅಪಶಕುನಗಳಾಯಿತು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಸಿನಿಮಾ ಮಾಡಿದೆವು ಎಂದು ತಿಳಿಸಿದ್ದರು.
ಉಪೇಂದ್ರ ಬೆಳೆದು ಬಂದ ದಾರಿ ಇಂದಿನ ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಫೂರ್ತಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಒಳ್ಳೆ ಚಿತ್ರಗಳು ಬರಲಿ ಅನ್ನೋದು ಅಭಿಮಾನಿಗಳ ಹಾರೈಕೆ.
ಇನ್ನಷ್ಟು ಓದಿರಿ :
ಹೊಸ ಟರ್ಬೊ-ಪೆಟ್ರೋಲ್ ಎಂಜಿನ್ ಫೀಚರ್ಸ್: ಟೀಸರ್ ಬಿಡುಗಡೆ