ಬಹುಭಾಷೆಯ ಸೂಪರ್ ಸ್ಟಾರ್ಸ್ ಸಿನಿಮಾಗಳಿಗೆ ಕೆಲಸ ಮಾಡಿರುವ ರವಿವರ್ಮ ಇತ್ತೀಚೆಗೆ ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯಭೂಮಿಕೆಯ 'ಮಾರ್ಕ್' ಚಿತ್ರಕ್ಕೂ ಸಾಹಸ ಸಂಯೋಜಿಸಿದ್ದಾರೆ. ರವಿವರ್ಮ ಈವರೆಗೆ ಎಷ್ಟು ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ? ಪುನೀತ್, ಶಿವಣ್ಣ, ಪವನ್ ಕಲ್ಯಾಣ್, ಶಾರುಖ್ ಖಾನ್, ಸನ್ನಿ ಡಿಯೋಲ್ ಅವರಂತಹ ಘಟಾನುಘಟಿಗಳ ಜೊತೆ ಕೆಲಸ ಮಾಡಿದ್ದ ಅನುಭವ ಹೇಗಿತ್ತು? ಎದುರಿಸಿದ ಸವಾಲುಗಳೇನು? ರಾಜ್ ಬಿ.ಶೆಟ್ಟಿ ಅವರ ಸಿನಿಮಾ ನಿರ್ಮಾಣ ಮಾಡಿದ ಅನುಭವ ಹೇಗಿತ್ತು? ಹೀಗೆ ಹಲವಾರು ವಿಚಾರಗಳನ್ನು ಈಟಿವಿ ಭಾರತ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
''ನಾನು ಆಟೋ ಓಡಿಸುತ್ತಿದ್ದೆ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತಿದೆ. ಆದ್ರೆ, ನನ್ನನ್ನು ಬೆಳೆಸಿದ್ದು ಕರ್ನಾಟಕದ ಸಾಹಸ ಕಲಾವಿದರು, ಸಾಹಸ ನಿರ್ದೇಶಕರು, ನನ್ನ ಸಹೋದರ ರಾಜ್ಕುಮಾರ್ ಮತ್ತು ಸಾಹಸ ನಿರ್ದೇಶಕ ಕೆ.ಡಿ.ವೆಂಕಟೇಶ್ ಅವರು. ಇಂಡಸ್ಟ್ರಿಯಲ್ಲಿ ಏನಾದರು ಮಾಡಬೇಕು ಅಂತಾ ಬಂದವನು ನಾನು. ಆ ಕಾಲದಲ್ಲಿ ಕಾರ್ ಜಂಪ್ ಮಾಡುವ ಆ್ಯಕ್ಷನ್ ಸೀನ್ಸ್ಗಾಗಿ ಚೆನ್ನೈನಿಂದ ಸಾಹಸ ನಿರ್ದೇಶಕರನ್ನು ಕರೆಸುತ್ತಿದ್ದರು.
ಆ ಕಾಲದಲ್ಲೇ ಒಬ್ಬ ಕನ್ನಡದ ಖ್ಯಾತ ನಟ ಹಾಗೂ ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಜೊತೆ ಆ ಕಾಲದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದೆ. ಆ ಚಿತ್ರ ಕೂಡಾ ಕಮರ್ಷಿಯಲ್ ಹಿಟ್ ಆಯಿತು. ನಿರ್ದೇಶಕನ ಜವಾಬ್ದಾರಿ ಎಷ್ಟರ ಮಟ್ಟಿಗೆ ಇರುತ್ತೆ ಅನ್ನೋದನ್ನು ಮತ್ತಷ್ಟು ಕಲಿತೆ. ಆ ಅನುಭವದಿಂದ ಬಾಲಿವುಡ್ನಲ್ಲಿ ಎರಡನೇ ಸಿನಿಮಾ ನಿರ್ದೇಶನ ಮಾಡೋದಕ್ಕೆ ಸಾಧ್ಯ ಆಗಿದೆ'' ಅಂತಾರೆ ರವಿವರ್ಮ.
''ಕನ್ನಡ ಸೇರಿ ಬರೋಬ್ಬರಿ 700ಕ್ಕೂ ಹೆಚ್ಚು ಸಿನಿಮಾಗಳಿಗೆ ನಾನು ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಜೊತೆಗೆ ಎರಡು ಸಿನಿಮಾಗಳ ನಿರ್ದೇಶನ ಮಾಡಿದ್ದು, ಮತ್ತೆರಡು ಕಥೆಗಳನ್ನು ಕೇಳುತ್ತಿದ್ದೇನೆ'' ಎಂದರು.
''ವಂಶಿ, ಹುಡುಗರು, ಜಾಕಿ, ಅಣ್ಣಾಬಾಂಡ್, ದೊಡ್ಮನೆ ಹುಡ್ಗ, ಜೇಮ್ಸ್ ಹೀಗೆ ಸಾಕಷ್ಟು ಸಿನಿಮಾಗಳಿಗೆ ನಾನು ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅದ್ರಲ್ಲೂ, ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ಭಗವಂತನ ರೂಪದಲ್ಲಿ ಬರುವ ಸೀನ್ಗೆ ನಾನು ಸಾಹಸ ನಿರ್ದೇಶನ ಮಾಡಿದ್ದು, ಭಾಗ್ಯವಂತ ನಾನು. ಏಕೆಂದರೆ, ಅವರನ್ನು ದೇವರಾಗಿ ತೋರಿಸಿದ್ದೇನೆ. ಅವರೊಂದಿಗಿನ ನೆನಪುಗಳು ಮರೆಯಲಾಗದ್ದು'' ಅಂತಾರೆ ರವಿವರ್ಮ.
''ಹೊಸ ನಿರ್ದೇಶಕರಿಗೆ ಬೆನ್ನು ತಟ್ಟುವುದು ಶಿವಣ್ಣ ಅವರ ಒಳ್ಳೆಗುಣ. 100 ಸಿನಿಮಾ ಮಾಡಿರುವ ಬಹುಬೇಡಿಕೆ ನಟ ಏಕೆ ಹೊಸ ನಿರ್ದೇಶಕನ ಜೊತೆ ಕೆಲಸ ಮಾಡಬೇಕು ಹೇಳಿ?. ಹೊಸಬರಿಗೆ ಸಪೋರ್ಟ್ ಮಾಡುವ ದೃಷ್ಟಿಯಿಂದಲೂ ಶಿವಣ್ಣ ಇಂದಿಗೂ ಹಲವು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ನಾನು ಸೇರಿ ಜೋಗಿ ಪ್ರೇಮ್, ಆರ್.ಚಂದ್ರು.. ಹೀಗೆ ಸಾಕಷ್ಟು ಹೊಸ ನಿರ್ದೇಶಕರು ಶಿವಣ್ಣನ ಸಿನಿಮಾದಿಂದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ನನ್ನ ಮೊದಲ ಸಿನಿಮಾದಲ್ಲಿ ಶಿವಣ್ಣನಿಗೆ ನಿರ್ದೇಶನ ಮಾಡಿದ ಸಂದರ್ಭ, ಅವರ ಜೊತೆ ವಿವೇಕ್ ಒಬೆರಾಯ್ ಕೂಡಾ ಶಿವಣ್ಣನ ಸರಳತೆಗೆ ಫಿದಾ ಆಗಿದ್ರು. ನನ್ನ ಚೊಚ್ಚಲ ಚಿತ್ರಕ್ಕೆ ಶಿವಣ್ಣ ಹೀರೋ ಆಗಿದ್ದು ನನ್ನ ಅದೃಷ್ಟ'' ಅಂತಾರೆ ರವಿವರ್ಮ.
''ಕೆಂಪೇಗೌಡ ಚಿತ್ರದಿಂದ ಹಿಡಿದು ಸುದೀಪ್ ಅವರ ಹಲವು ಚಿತ್ರಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಇತ್ತೀಚೆಗಷ್ಟೇ ತೆರೆಕಂಡ ಮಾರ್ಕ್ ಸಿನಿಮಾದಲ್ಲಿ ಕಾಳಿಯ ಆ್ಯಕ್ಷನ್ ಸಿಕ್ವೇನ್ಸ್ ಅನ್ನು ನಿರ್ವಹಿಸಿದ್ದೇನೆ. ಮಾರ್ಕ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರಿಂದ ಕೆಲಸಗಳು ಶೀಘ್ರವೇ ಪೂರ್ಣಗೊಳ್ಳಬೇಕಿತ್ತು.
ಸುದೀಪ್ ಸರ್ ಒಂದು ಕಡೆ ಬೇರೆ ಸೀನ್ ಮುಗಿಸಿಕೊಂಡು ನಂತರ ನಮ್ಮ ಆ್ಯಕ್ಷನ್ ಸೀನ್ಸ್ ಮಾಡೋದಕ್ಕೆ ಬರುತ್ತಿದ್ರು. ಅವರ ಎನರ್ಜಿ ಮಾತ್ರ ಯಾವತ್ತಿಗೂ ಕಡಿಮೆ ಆಗಿಲ್ಲ. ಸುದೀಪ್ ಸರ್ ಜೊತೆ ಕೆಲಸ ಮಾಡುವಾಗ ಒಂದು ದೊಡ್ಡ ಜವಾಬ್ದಾರಿ ಇರುತ್ತದೆ. ಆದ್ರೆ, ಯಾವತ್ತಿಗೂ ಆ ಶಾಟ್ ಏಕೆ ರವಿ ಅಂತಾ ಅವರು ಪ್ರಶ್ನೆ ಮಾಡಿಲ್ಲ. ಹಾಗಾಗಿ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಬೇಕೆನ್ನುವ ಚಾಲೆಂಜ್ ನನಗಿರುತ್ತದೆ'' ಎಂದು ತಿಳಿಸಿದರು.
ಇನ್ನಷ್ಟು ಓದಿರಿ :
ಯಶ್ ಬರ್ತ್ಡೇ ಸ್ಪೆಷಲ್ : ರಾಕಿಂಗ್ ಸ್ಟಾರ್ ಕೊಟ್ಟ ಸಂದೇಶ