ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿದ 'ಬೆಳ್ಳೂಡಿ ಕಾಳಿ'ಗೆ ವಿದಾಯ ಹೇಳಲು ಜನಸಾಗರವೇ ಹರಿದುಬಂದಿತ್ತು. ಅಲ್ಲದೆ, ಮನುಷ್ಯರ ರೀತಿಯಲ್ಲಿ ಹಿಂದೂ ಧರ್ಮದ ವಿಧಿವಿಧಾನದಂತೆ ದಫನ್ ಕೂಡ ಮಾಡಲಾಯಿತು.
ಪ್ರೀತಿಯ ಕಾಳಿಗೆ ಮಾಲೀಕರಾದ ರಾಘವೇಂದ್ರ ಹಾಗೂ ಮೋಹನ್ ಸೇರಿದಂತೆ ಅವರ ತಂಡ ಅದರ ಸಮಾಧಿ ನಿರ್ಮಾಣ ಮಾಡಿದ್ದು ಸದ್ಯದ ವಿಶೇಷತೆ. ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಶಿವಮೊಗ್ಗ ರಸ್ತೆಯಲ್ಲಿರುವ ಸಮಾಧಿ ನಿರ್ಮಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ನಿತ್ಯವು ಪೂಜೆ ಸಲ್ಲಿಸಲಾಗುತ್ತದೆ ಅನ್ನೋದು ಮತ್ತೊಂದು ವಿಶೇಷತೆ.
ತನ್ನದೇಯಾದ ಹೆಸರು ಮಾಡಿ ಮಡಿದ ತನ್ನ ನೆಚ್ಚಿನ ಕಾಳಿ ಟಗರಿಗೆ ರಾಘವೇಂದ್ರ ಹಾಗೂ ಮೋಹನ್ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಲಿನಿಂದ ಸಮಾಧಿ ನಿರ್ಮಾಣ ಮಾಡುವ ಮೂಲಕ ಅದರ ನೆನಪನ್ನು ಸದಾ ಇರುವಂತೆ ಮಾಡಿದ್ದಾರೆ. ತಮಿಳುನಾಡು ಮೂಲದ ಶಕ್ತಿ ಎಂಬ (ಶಿಲ್ಪಿ) ಕಲಾವಿದ ಹೆಚ್ಚು ಹಣ ಪಡೆಯದೇ ಕೇವಲ ಕೂಲಿ ಮಾತ್ರ ಪಡೆದು ಈ ಸಮಾಧಿ ನಿರ್ಮಾಣ ಮಾಡಿದ್ದಾರೆ.
ಇವರು ಕೂಡ ಈ ಕಾಳಿಯ ಅಭಿಮಾನಿ ಅನ್ನೋದು ವಿಶೇಷ. ಸಮಾಧಿ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ದಿನಾಂಕ ಕೂಡ ಫಿಕ್ಸ್ ಮಾಡಲಾಗಿದೆ. ಇದೇ ತಿಂಗಳು 25ಕ್ಕೆ ಉದ್ಘಾಟನೆಯಾಗಲಿದ್ದು, ಎಲ್ಲ ತಯಾರಿ ಕೂಡ ನಡೆದಿದೆ. ಮಠಾಧೀಶರಾದ ಕನಕ ಗುರು ಪೀಠದ ಶ್ರೀ ನಿರಂಜನನಂದಪುರಿ ಶ್ರೀ ಆಗಮಿಸುತ್ತಿದ್ದು, ಅದರ ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಸಮಾಧಿ ಉದ್ಘಾಟನೆ ಮಾಡುವ ಕಾರ್ಯಕ್ರಮದ ದಿನದಂದೇ ಉಚಿತ ರಕ್ತದಾನ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ. ಟಗರು ಮಾಲೀಕ ರಾಘವೇಂದ್ರ ಮಾತನಾಡಿ "ಈ ಟಗರು ಮಾಡಿದ ಹೆಸರು ಯಾರು ಮಾಡಲು ಸಾಧ್ಯವಿಲ್ಲ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವೆಡೆ ಇದರ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಇದರ ಮಣ್ಣಿಗೆ (ದಫನ್) ಬಂದಿದ್ದರು. ಕಾಳಿ ಎಂಬ ಹೆಸರಿನಲ್ಲಿ ಭಕ್ತಿ ಇತ್ತು. ಎಷ್ಟೋ ಜನರು, ಅಭಿಮಾನಿಗಳು ಹಚ್ಚೆ-ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದರಿಂದ ಗಳಿಸಿದ್ದನ್ನು ನಾನು ಲೆಕ್ಕ ಹಾಕಲು ಹೋಗಲ್ಲ. ಅಭಿಮಾನಿಗಳಿಗಾಗಿ ಶಾಸ್ತ್ರೋಕ್ತವಾಗಿ ಸಮಾಧಿ ನಿರ್ಮಾಣ ಮಾಡಿದ್ದೇವೆ. ದೇವರಿಗಿಂತ ಹೆಚ್ಚು ಕಾಳಜಿ ವಹಿಸಿದ್ದೇವೆ.
9 ತಿಂಗಳು ಆಯಿತು ಸಮಾಧಿ ಮಾಡಿ, ಜ. 25ಕ್ಕೆ ಉದ್ಘಾಟನೆಯಾಗಲಿದೆ. ಇದಕ್ಕೆ ಅಖಿಲ ಕರ್ನಾಟಕ ಬೆಳ್ಳೂಡಿ ಕಾಳಿ ಅಭಿಮಾನಿ ಬಳಗ ಎಂದು ಸಂಘ ಕಟ್ಟಿದ್ದೇವೆ. ಕಲ್ಲಿನ ಕೆಲಸ ಆಗಿದ್ದರಿಂದ 9 ಲಕ್ಷ ಆಗಿದೆ. ಉದ್ಘಾಟನೆಗೆ ಬೇಕಾದ ಹಣ ಸೇರಿ ಒಟ್ಟು 12 ಲಕ್ಷ ಆಗಲಿದೆ ಎಂದು ತಿಳಿಸಿದರು. ಮರಿಕುರಿ ತಂದು ಸಾಕಿದ ಕುರಿ ಇದಾಗಿತ್ತು. ಇಷ್ಟರ ಮಟ್ಟಿಗೆ ಆಡುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಇದನ್ನು ಮಾರಾಟ ಮಾಡಲು ಕೂಡ ತಯಾರಿ ನಡೆದಿತ್ತು. ಅದರೇ ಕಾರಣಾಂತರಗಳಿಂದ ಮಾರಲಿಲ್ಲ.
ರಾಜ್ಯದಲ್ಲೇ ಹೆಸರು ಮಾಡಿದ ಏಕೈಕ ಟಗರು ಇದಾಗಿದೆ. ಮನೆಯ ಮಗನಂತಿತ್ತು. ಅದನ್ನು ಕಳೆದುಕೊಂಡಿದ್ದಕ್ಕೆ ಬಹಳ ನೋವು ಇದೆ. ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮತ್ತಷ್ಟು ಜನ ತಮ್ಮ ತಮ್ಮ ಮನೆಯಲ್ಲಿ ಅದರ ಫೋಟೋ ಹಾಕಿದ್ದಾರೆ. ಮನೆ ಮೇಲೆ ಸಿಮೆಂಟ್ ಮಾದರಿಯ ಮೂರ್ತಿ ಮಾಡಿಸಿ ಹಾಕಿಕೊಂಡಿರುವುದು ಅಭಿಮಾನವೇ ಸರಿ. ಕಣಕ್ಕಿಂತ ಕ್ರೇಜ್ ಜಾಸ್ತಿ ಇತ್ತು. ಅದರ ಆಟದ ಗಮ್ಮತ್ತೇ ಹಾಗಿತ್ತು. ಮೂರು-ನಾಲ್ಕು ಹೊಡೆತಕ್ಕೆ ಎದುರಾಳಿ ಟಗರನ್ನು ಸೋಲಿಸುತ್ತಿತ್ತು. ಕಾಳಿಯನ್ನು ಕಳೆದುಕೊಂಡು 13 ತಿಂಗಲಾದರೂ ಅದನ್ನು ನಾವು ಮರೆತಿಲ್ಲ" ಎಂದರು.
ಇನ್ನಷ್ಟು ಓದಿರಿ:
ಮಾನ್ಯ ಹತ್ಯೆ ಪ್ರಕರಣದಲ್ಲಿ ಪ್ರಗತಿ : ಚಾರ್ಜ್ ಶೀಟ್ ಸಲ್ಲಿಕೆ