"ಚೀನಾದ ನಾಯಕತ್ವವು ಪಾಕಿಸ್ತಾನದ ನಾಯಕತ್ವದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಭಾರತ- ಪಾಕಿಸ್ತಾನದ ನಡುವೆ ಸಂಘರ್ಷ ನಡೆದ ಮೇ 6 ರಿಂದ 10 ರವರೆಗಿನ ಆ ಮೂರು-ನಾಲ್ಕು ದಿನಗಳಲ್ಲಿ ಅಥವಾ ಅದಕ್ಕೂ ಮೊದಲು ಮತ್ತು ನಂತರ ಭಾರತ ಸರ್ಕಾರದ ಜೊತೆ ಸಂಘರ್ಷ ನಿಲುಗಡೆಗೆ ಚೀನಾ ಮಾತುಕತೆ ನಡೆಸಿದೆ" ಎಂದು ತಾಹಿರ್ ಅಂದ್ರಾಬಿ ಹೇಳಿದ್ದಾರೆ.
"ಸಕಾರಾತ್ಮಕ ರಾಜತಾಂತ್ರಿಕತೆಯಿಂದ ನಡೆದ ಈ ಮಾತುಕತೆಗಳು ಸಂಘರ್ಷವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡಲು ಕೊಡುಗೆ ನೀಡಿವೆ. ಚೀನಾದ ಮಧ್ಯಸ್ಥಿಕೆ ಫಲ ತಂದಿದೆ ಎಂದು ನನಗೆ ಖಚಿತವಾಗಿದೆ" ಎಂದು ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಚೀನಾದ ಪಾತ್ರವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು 'ನಾನೇ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಲೂ ಹೇಳಿಕೊಳ್ಳುತ್ತಿದ್ದಾರೆ. ಇದೀಗ, ನೆರೆಯ ರಾಷ್ಟ್ರ ಚೀನಾ ಇದರಲ್ಲಿ ತನ್ನದೂ ಪಾತ್ರವಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ.
ಈ ಹಿಂದೆ, ಅಮೆರಿಕ ಅಧ್ಯಕ್ಷರ ಮಾತಿಗೆ ವಿಧಿಯಿಲ್ಲದೆ ತಲೆ ಆಡಿಸಿದ್ದ ಪಾಕಿಸ್ತಾನ ಇದೀಗ, ಚೀನಾ ಊದಿದ ಪುಂಗಿಗೂ ತಲೆದೂಗಿದೆ. ಭಾರತದೊಂದಿಗಿನ ಸಂಘರ್ಷ ಶಮನದಲ್ಲಿ ಚೀನಾದ ಪಾತ್ರವಿದೆ. ಶಾಂತಿಗಾಗಿ ರಾಜತಾಂತ್ರಿಕ ಮಾತುಕತೆ ನಡೆಸಿತ್ತು ಎಂದು ಪಾಕಿಸ್ತಾನ, ಚೀನಾದ ಹೇಳಿಕೆಯನ್ನು ಬೆಂಬಲಿಸಿದೆ. ನಾಲ್ಕು ದಿನಗಳ ಘರ್ಷಣೆಗೆ ತತ್ತರಿಸಿದ ಪಾಕಿಸ್ತಾನವು ಮಂಡಿಯೂರಿ ಕದನ ನಿಲ್ಲಿಸುವಂತೆ ಕೋರಿತ್ತು. ಇದರಿಂದಾಗಿ ಮೇ 10 ರಂದು ಸೇನಾ ಕಾರ್ಯಾಚರಣೆ ನಿಲ್ಲಿಸಿದೆವು.
ಇದು ಎರಡೂ ದೇಶದ ಸೇನೆಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ನೇರ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲಾಗಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ. ಆದರೆ, ಅಮೆರಿಕ ಮತ್ತು ಚೀನಾದ ಮಧ್ಯಸ್ಥಿಕೆ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ನಿರಾಕರಿಸಿದೆ. 26 ನಾಗರಿಕರ ಬಲಿ ತೆಗೆದುಕೊಂಡ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು.
ಬೀಜಿಂಗ್ನಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮಾತನಾಡಿ, 2025 ರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದ ಸಂಘರ್ಷಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧವೂ ಸೇರಿದೆ ಎಂದು ಹೇಳಿದ್ದರು. ಈ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಶಮನಕ್ಕೆ ಚೀನಾವೂ ಮಧ್ಯಸ್ಥಿಕೆ ವಹಿಸಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.
ಇನ್ನಷ್ಟು ಓದಿರಿ:
ಚೀನಾ ಭೇಟಿ ಮುನ್ನ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗ